
ಅಣ್ಣಾವ್ರು ಇವತ್ತಿಂದ ಮನೆ ಕಟ್ಟೋಕ ಶುರು ಮಾಡಿ ಅಂದದ್ದು ಯಾಕೆ?
ಮಿಮಿಕ್ರಿ ದಯಾನಂದ ಲೈಫ್ಸ್ಟೋರಿ ಭಾಗ 50

ದೇವೇಗೌಡ ಅವರು ಮುಖ್ಯಮಂತ್ರಿ ಆಗಿದ್ದಾಗ ವೇದಿಕೆಯಲ್ಲಿ ಪ್ರದರ್ಶನ ನೀಡುವ ಅವಕಾಶ ದೊರಕಿತ್ತು. ರಾಜ್ಕುಮಾರ್ ಅವರು ಆ ವೇದಿಕೆಯಲ್ಲಿದ್ದರು. ಆಗ ದೂರದರ್ಶನ ಒಂದೇ ಇದ್ದಿದ್ದು. ಲೈವ್ ಪ್ರೋಗ್ರಾಂ ಆಗುತ್ತಿತ್ತು. ಸ್ವಲ್ಪ ಗ್ಯಾಪ್ ಇದ್ದಾಗ ಯಾರಾದ್ರೂ, ಏನಾದ್ರೂ ಕಾರ್ಯಕ್ರಮ ಮಾಡಿ ಎಂದ್ರು. ಆದರೆ, ಅದಕ್ಕಾಗಿ ಇನ್ಸ್ಟ್ರೂಮೆಂಟ್ ಬೇಕಿತ್ತು. ಹಾಗಾಗಿ, ಮಿಮಿಕ್ರಿ ಮಾಡುವಂತೆ ನನಗೆ ಕರೆದ್ರು. ಕಪ್ಪಣ್ಣ ಇದ್ರು ಅವತ್ತು. ಸಚಿವರು, ಇಂಡಸ್ಟ್ರಿಯವರೆಲ್ಲ ಇದ್ರು. ನಾನು ಮಿಮಿಕ್ರಿ ಶುರು ಮಾಡಿದೆ. ಈಗ ರಾಜ್ಕುಮಾರ್ ಅವರು ಭಾಷಣ ಮಾಡ್ತಾರೆ ಎಂದು ಶುರು ಹಚ್ಚಿಕೊಂಡೆ. ಜನರೆಲ್ಲ ಜೋರಾಗಿ ಚಪ್ಪಾಳೆ ಹೊಡೆಯಲು ಶುರು ಮಾಡಿದ್ರು. ನಾನು ಅವತ್ತು ಫೇಲ್ಯೂರ್ ಆಗಿದ್ರೆ, ನನ್ನನ್ನು ಪೀಸ್, ಪೀಸ್ ಮಾಡಿ ಹಾಕುತ್ತಿದ್ರು. 70 ಸಾವಿರ ಪ್ರೇಕ್ಷಕರಿದ್ರು. ರಾಜ್ಕುಮಾರ್ ಅವರು ವೇದಿಕೆಯಲ್ಲಿಯೇ ಇಷ್ಟು ಹೊತ್ತು ನಾನು ಮಾತಾಡಿದ್ನೋ, ಅವರು ಮಾತಾಡಿದ್ರೋ ನನಗೇ ಗೊತ್ತಿಲ್ಲ ಅಂದ್ರು.
ನಂತರದಲ್ಲಿ ನನ್ನನ್ನು ಮಾತಾಡಿಸಿದ ಅವರು, ಹೇಗಿದ್ದೀರಿ? ಊಟ ಮಾಡಿದ್ರಾ ಎಂದ್ರು. ಅಷ್ಟರೊಳಗೆ ದೇವೇಗೌಡ ಅವರು ಬಂದು, ಇವರನ್ನು ಡಿನ್ನರ್ಗೆ ಕರೀರಿ ಎಂದ್ರು. ಸೆಕ್ಯುರಿಟಿ ಜೊತೆಗೆ ನನ್ನನ್ನು ಸ್ಟೇಟ್ ಡಿನ್ನರ್ಗೆ ಕರೆದುಕೊಂಡು ಹೋದ್ರು. ಮಿಮಿಕ್ರಿ ಕಲಾವಿದನಿಗೆ ಮೊದಲ ಬಾರಿಗೆ ಸಿಕ್ಕ ಗೌರವ ಅದು. ಅದಾದ ಮೇಲೆ ರಾಜ್ಯಪ್ರಶಸ್ತಿ ಕಾರ್ಯಕ್ರಮಗಳಲ್ಲೂ ಮಿಮಿಕ್ರಿ ಬೇಕು ಅನ್ನುವಂತಾಗಿ ಬಿಟ್ಟಿತ್ತು. ನಾನು ಮೊದಲು ಹಾಕಿದ ಹಾದಿ ಅದು. ರಾಜ್ಕುಮಾರ್ ಅವರು ಮಾತನಾಡಿಸುತ್ತಾ, ಮನೆ ಗಿನೆ ಕಟ್ಟಿಸಿದ್ರೋ ಎಂದ್ರು. ಇಲ್ಲಣ್ಣ ಎಂದೆ. ಇವತ್ತಿನಿಂದ ಶುರು ಮಾಡ್ಕೊಳ್ಳಿ ಎಂದ್ರು. ಇವತ್ಯಾಕ್ಕೆ ಎಂದು ಯೋಚಿಸಿದೆ. ಆದ್ರೆ, ಅವತ್ತಿನಿಂದ ನನ್ನ ಅದೃಷ್ಟವೇ ಬದಲಾಯ್ತು. ಸಾಕಷ್ಟು ಅವಕಾಶಗಳು ಸಿಗಲು ಆರಂಭವಾಯ್ತು. ನಾನು ಸ್ಟಾರ್ ಆದೆ. ಪೇಪರ್ಗಳಲ್ಲಿಯೂ ಲೇಖನಗಳು ಬಂದವು.
ಧೃವತಾರೆ ಸಿನಿಮಾದಲ್ಲಿ ರಾಜ್ಕುಮಾರ್ ಅವರಿಗೆ ಹೊಡೆಯುವ ಆ್ಯಕ್ಟಿಂಗ್ ಮಾಡಿ ಎಂದಾಗ, ಇಲ್ಲಪ್ಪ, ನಾನು ಮಾಡಲ್ಲ. ಚಾಮರಾಜಪೇಟೆಯಲ್ಲಿ ನಾನಿರುವುದು. ನಾಯಿಗೆ ಹೊಡೆದ ಹಾಗೆ ಹೊಡೆಯುತ್ತಾರೆ ಎಂದಿದ್ದೆ. ಅಂಥ ರಾಜ್ಕುಮಾರ್ ಅವರ ಮುಂದೆ ಮಿಮಿಕ್ರಿ ಮಾಡುವ ಹಾಗೆ ಆಯ್ತು.
ಮುಂದುವರೆಯುವುದು..