
ದುಬೈ ಶೇಖ್ಗಳು ದಯಾನಂದ ಪ್ರೋಗ್ರಾಂ ನೋಡಿ ಹೇಳಿದ್ದೇನು
ಮಿಮಿಕ್ರಿ ದಯಾನಂದ ಲೈಫ್ಸ್ಟೋರಿ ಭಾಗ 43

ಇವತ್ತು ದೊಡ್ಡ ಕಾಮಿಡಿಯನ್ಸ್ ಮಾಡುತ್ತಿರುವುದನ್ನು ನಾನು ಹೈದಿನದು, ಇಪ್ಪತ್ತು ವರ್ಷಗಳ ಹಿಂದೆಯೇ ಮಾಡಿದ್ದೆ. ಬೇರೆ, ಬೇರೆ ಭಾಷೆಗಳು ಕಾಮಿಡಿಯಲ್ಲಿ ಹೇಗೆ ಕೇಳಿಸುತ್ತದೆ ಎಂಬುದನ್ನು ನಾನು ಆಗಲೇ ಗ್ರಹಿಸಿದ್ದೆ. ದುಬೈಗೆ ಒಮ್ಮೆ ಶೋ ಮಾಡಲು ಹೋಗಿದ್ದೆ. ವಿಷ್ಣು ಸರ್, ಸೌಂಡ್ ಆಫ್ ಮ್ಯೂಸಿಕ್ ಗುರು ಇದ್ರು. ಶೇಕ್ ಕಡೆಯವರು ಬಂದಿದ್ರು, ಟ್ರಾನ್ಸ್ ಲೇಟ್ ಮಾಡುವವರು ಇದ್ರು. ಒಂದು ತಪ್ಪು ಮಾತಾಡಿದ್ರು ಕಂಬಿ ಒಳಗೆ ಹಾಕ್ತಾರೆ. ಅವರ ದೇಶ, ಧರ್ಮದ ಬಗ್ಗೆ ಒಂದೂ ಮಾತನಾಡುವಂತಿರಲಿಲ್ಲ. ಬೇರೆ ಕಾರ್ಯಕ್ರಮಗಳು ಆಗಲೇ ಆರಂಭವಾಗಿತ್ತು. ಹಾಗಾಗಿ ನಾನು ವೇದಿಕೆ ಏರುತ್ತಿದ್ದಂತೆ ಎಲ್ಲ ಊಟಕ್ಕೆ ಹೊರಟರು. ನನಗೆ ಹೇಗೆ ಅವಮಾನ ಆಗಿರಬೇಡ. ನಾನು ಮೈಕ್ ಹಿಡ್ಕೊಂಡು 26 ಸಾವಿರ ಕನ್ನಡಿಗರಿಗೆ ಆಶ್ರಯ ನೀಡಿರುವ ದುಬೈ ಮಣ್ಣಿಗೆ ನನ್ನ ನಮಸ್ಕಾರ ಎಂದೆ. ಶೇಕ್ ಕಡೆಯವರು ಏನು ಹೇಳುತ್ತಿದ್ದಾರೆ ಎಂದು ಟ್ರಾನ್ಸ್ಲೇಟ್ ಮಾಡುವವರನ್ನ ಕೇಳಿದ್ರು. ಆತ ಹೇಳುತ್ತಿದ್ದಂತೆ, ಶೇಕ್ ಕಡೆಯವರು ಎದ್ದು ಧನ್ಯವಾದ ತಿಳಿಸಿದ್ರು. ಊಟಕ್ಕೆ ಹೊರಡುತ್ತಿದ್ದವರು ಹೋ.. ಎಂದು ಕೂಗುತ್ತ ವಾಪಸ್ ಬಂದ್ರು. ಒಂದು ಗಂಟೆ ಶೋ ಮಾಡಿದೆ. ಅಡುಗೆ ಬಡಿಸುವವರು ಸುತ್ತಲೂ ನಿಂತಿದ್ರು.
ಇದು ನನ್ನ ದೊಡ್ಡಸ್ಥಿಕೆ ಅಲ್ಲ. ಪ್ರೇಕ್ಷಕರನ್ನು ಸೆಳೆಯುವ ಕಲೆಯ ಬಗ್ಗೆ ಗೊತ್ತಿರಬೇಕು. ಇದನ್ನು ಕಲಿತಿದ್ದು, ವಿವೇಕಾನಂದ ಅವರಿಂದ. ಷಿಕಾಗೋದಲ್ಲಿ ಬ್ರದರ್ಸ್ ಅಂಡ್ ಸಿಸ್ಟರ್ಸ್ ಎಂದು ಭಾಷಣ ಮಾಡುತ್ತಿದ್ದಂತೆ ಎಲ್ಲ ತಿರುಗಿ ನೋಡಿದ್ರು.
ನಾವು ಹೋಗುವ ದೇಶದ ಬಗ್ಗೆ ಮೊದಲು ಅರ್ಥ ಮಾಡಿಕೊಳ್ಳಬೇಕು. ಅದರ ಬಗ್ಗೆ ಮಾತನಾಡಬೇಕು. ಇಲ್ಲಿ ಧರ್ಮಗಳ ನಡುವೆ ಗಲಾಟೆ ಆದಾಗ, ಮುಸ್ಲಿಂ ರಾಷ್ಟ್ರವೊಂದರ ಶೇಖ್ ಒಬ್ಬರು ಅಲ್ಲಿಯ ದೇವಸ್ಥಾನದ ಶಿವನಲಿಂಗವನ್ನು ತೆಗೆದುಕೊಂಡು ಹೋಗಿ ಮನೆಯಲ್ಲಿ ಇಟ್ಟುಕೊಂಡು 42 ದಿವಸ ಪೂಜೆ ಮಾಡಿದ್ರಂತೆ. ಭಾರತದಿಂದ 10 ಪುರೋಹಿತರನ್ನು ಕರೆಸಿ ಮೂರ್ತಿಯನ್ನು ಪುನರ್ ಪ್ರತಿಷ್ಠಾಪನೆ ಮಾಡಿಸಿದ್ರಂತೆ. ಇದನ್ನು ಯಾರೂ ಹೇಳುವುದಿಲ್ಲ. ಮಧ್ಯ ತಂದಿಕ್ಕಿ ಜಗಳ ಮಾಡಿಸುವುದನ್ನು ಮಾತ್ರ ನೋಡುತ್ತಾರೆ. ಭಾವೈಕ್ಯದ ಬಗ್ಗೆ ಸಾರಬೇಕು. ಮುಸ್ಲಿಂ ರಾಷ್ಟ್ರದವರು ನಮ್ಮ ರಾಷ್ಟ್ರದ ಬಗ್ಗೆ ಎಷ್ಟು ಗೌರವ ಕೊಡುತ್ತಾರೆ ಎಂಬುದನ್ನು ತಿಳಿಸಬೇಕು. ಬಹಳ ಅಗಾಧವಾದ ಪ್ರೀತಿಯನ್ನು ನಮ್ಮ ಮೇಲೆ ಇಟ್ಟುಕೊಂಡಿರುತ್ತಾರೆ. ಅದನ್ನು ಮಿಮಿಕ್ರಿಯಲ್ಲಿ ಹೇಳಬೇಕು. ಅದು ನಮ್ಮ ಜವಾಬ್ದಾರಿ. ಇಷ್ಟು ದಿನ ಜನರು ನಮಗೆ ಅನ್ನ ಹಾಕಿದ್ದಾರೆ. ನಾವು ಶೋಗಳ ಮೂಲಕ ಒಳ್ಳೆಯ ಮೆಸೇಜ್ ಕೊಡುವುದು ನಮ್ಮ ಜವಾಬ್ದಾರಿ. ಶೋ ನೋಡುವವರು ನನ್ನ ಮಗ ಮಿಮಿಕ್ರಿ ಕಲಾವಿದ, ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿ ಸಮಾಜ ಸುಧಾರಣೆ ಮಾಡಬೇಕು ಎನ್ನುವ ಮಟ್ಟಿಗೆ ಈ ಕಲೆಯನ್ನು ತೆಗೆದುಕೊಂಡು ಹೋಗಬೇಕು ನಾವು. ಯಾರನ್ನೋ ರೇಗಿಸಿ, ರಾಜಕಾರಣಿಯನ್ನು ಏಕವಚನದಲ್ಲಿ ಮಾತನಾಡಿಸುವುದು ಸರಿಯಲ್ಲ.
ಪಾತ್ರೆ ತೊಳೆಯುವವರೇ ಯಾವಾಗಲೂ ಲೋಟ ಒಡೆದು ಹಾಕುವುದು. ಅದೇ ರೀತಿ ರಾಜ್ಯ ನಡೆಸುವವರಿಗೆ ಹೆಚ್ಚು ಕಮ್ಮಿ ಆಗುವುದು. ತಪ್ಪು ಮಾಡಿದವರ ವಿರುದ್ಧ ಧ್ವನಿ ಎತ್ತಿ. ಆದ್ರೆ, ಒಳ್ಳೆಯದು ಮಾಡುವವರಿಗೆ ಯಾಕೆ ಸುಮ್ಮನೆ ಬೈಯಬೇಕು. ಸ್ವಾಮಿಗಳು ತಪ್ಪು ಮಾಡಿದಾಗ, ನಾನು ಅದೇ ರೀತಿಯ ಬಟ್ಟೆ ಹಾಕಿಕೊಂಡು ಅವರ ವಿರುದ್ಧ ಮಾತನಾಡಿದ್ದೇನೆ.
ಮುಂದುವರೆಯುವುದು...