
ವಿಜಯ ಪ್ರಕಾಶ್ ನಮಗೆ ಮಾಡಿದ ಸಹಾಯ
ಸುಮಾ - ಎಲ್. ಎನ್ಶಾಸ್ತ್ರಿ ಲೈಫ್ ಸ್ಟೋರಿ ಭಾಗ-14

ಶಾಸ್ತ್ರಿ ಅವರ ಆರೋಗ್ಯ ಗಂಭೀರ ಸ್ಥಿತಿಯಲ್ಲಿತ್ತು. ಅದನ್ನು ಟಿವಿಯಲ್ಲಿ ವಿಜಯ ಪ್ರಕಾಶ್ ನೋಡಿದ್ರು. ಅವರು ಚೆನ್ನೈನಿಂದ ಬಾಂಬೆಗೆ ಹೋಗಬೇಕಿತ್ತು. ಆದರೆ, ಟಿಕೆಟ್ ಕ್ಯಾನ್ಸಲ್ ಮಾಡಿ ಶಾಸ್ತ್ರಿ ಅವರನ್ನು ನೋಡಲು ಬೆಂಗಳೂರಿಗೆ ಬಂದ್ರು. ಬೆಳಿಗ್ಗೆ ಫೋನ್ ಮಾಡಿ ನಾನು ಬರುತ್ತಿದ್ದೇನೆ ಎಂದು ಹೇಳಿ, ವಿಮಾನ ನಿಲ್ದಾಣದಿಂದ ನೇರವಾಗಿ ಮನೆಗೆ ಬಂದ್ರು. ಶಾಸ್ತ್ರಿ ಅವರ ಎದುರಿಗೆ ಕೂತು, ದೇವರ ಕೃತಿಯೊಂದನ್ನು ಹಾಡುತ್ತೇನೆ. ಇನ್ನೇನು ನನಗೆ ತಿಳಿಯುತ್ತಿಲ್ಲ ಎಂದರು. ಅರ್ಧ ಗಂಟೆ ಅತ್ತಿದ್ದರು. ಶಾಸ್ತ್ರಿ ಅವರೇ ಅಳಬೇಡಿ ಎಂದು ಸಮಾಧಾನ ಮಾಡಿದ್ರು. ವಿಜಯ್ ಪ್ರಕಾಶ್ ತುಂಬಾ ಒಳ್ಳೆಯ ಮನುಷ್ಯ. ನನ್ನ ಕೈಯಲ್ಲಿ ಒಂದು ಲಕ್ಷ ಇಟ್ಟರು. ನಾನು ಬೇಡ ಎಂದು ಎಷ್ಟು ಹೇಳಿದ್ರು, ಈ ಚಿಕಿತ್ಸೆಗೆ ಎಷ್ಟು ಖರ್ಚಾಗುತ್ತದೆ ಎಂಬ ಊಹೆ ಕೂಡ ನಿಮಗೆ ಇರುವುದಿಲ್ಲ. ನಾನು ಸಾಸಿವೆ ಕಾಳಿನಷ್ಟು ಕೊಡುತ್ತಿದ್ದೇನೆ. ದೇವರು ಆದಷ್ಟು ಬೇಗ ಅವರಿಗೆ ಚೇತರಿಕೆ ಕೊಡಲಿ ಎಂದು ಪ್ರಾರ್ಥನೆ ಮಾಡಿ ಹೋಗಿದ್ರು. ಹೀಗೆ ಕನ್ನಡ ಸಿನಿಮಾರಂಗದ ಸಾಕಷ್ಟು ಮಂದಿ ಬಹಳ ಸಹಾಯ ಮಾಡಿದ್ದಾರೆ.
ಶಾಸ್ತ್ರಿ ಅವರು ಸಂಗೀತ ನಿರ್ದೇಶನ ಮಾಡಿದ್ದ ಸಿನಿಮಾಗಳಲ್ಲೂ ವಿಜಯ್ ಪ್ರಕಾಶ್ ಹಾಡಿದ್ದಾರೆ. ಬಜೆಟ್ ಅಷ್ಟು ದೊಡ್ಡದಿಲ್ಲ ಎಂದು ಶಾಸ್ತ್ರಿ ಅವರು ಹೇಳಿದ್ರೆ, ‘ನೀವು ಕೊಟ್ಟಷ್ಟು ತೆಗೆದುಕೊಳ್ಳುತ್ತೇನೆ. ಕೊಡದಿದ್ದರೂ ನಾನೇನು ಕೇಳುವುದಿಲ್ಲ’ ಎಂದು ವಿಜಯ್ ಪ್ರಕಾಶ್ ಹೇಳುತ್ತಿದ್ದರು. ಶಾಸ್ತ್ರಿ ಅವರು ಅವರ ಒಳ್ಳೆಯ ಗುಣದಿಂದಲೇ ಭೌತಿಕವಾಗಿ ಅಲ್ಲದಿದ್ದರೂ, ಮಾನಸಿಕವಾಗಿ ಎಲ್ಲರಲ್ಲೂ ಉಳಿದಿದ್ದಾರೆ. ಇವತ್ತಿಗೂ ನನಗೆ ಎಲ್.ಎನ್. ಶಾಸ್ತ್ರಿ ಅವರ ಪತ್ನಿ ಎಂದು ಸಿನಿಮಾ ಕ್ಷೇತ್ರದಲ್ಲಿ ಬಹಳ ಗೌರವ ಕೊಡುತ್ತಾರೆ. ಅವರು ಬಿಟ್ಟು ಹೋಗಿರುವ ದೊಡ್ಡ ಆಸ್ತಿ ಅದೇ ನನಗೆ.
ಮುಂದುವರೆಯುವುದು...